ಶ್ರೀ ಬಟ್ಟೆವಿನಾಯಕ ದೇವಸ್ಥಾನವು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿದೆ. ಉಡುಪಿ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ಬಟ್ಟೆವಿನಾಯಕ ದೇವಸ್ಥಾನವು ಒಂದಾಗಿದೆ. ಇದು ಕರ್ನಾಟಕದ ಕರಾವಳಿಯಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿರುವ ಏಕೈಕ ಗಣಪತಿ ದೇವಾಲಯವಾಗಿದೆ. == ಇತಿಹಾಸ == ದೇವಾಲಯವು ಸಾವಿರಾರು ವರ್ಷದ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಬಾರ್ಕೂರು ಸಾಮ್ರಾಜ್ಯಕ್ಕಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗುತ್ತದೆ. ಆದಿಗುರು ಶಂಕರಾಚಾರ್ಯರು ಕೇರಳದಿಂದ ಕೊಲ್ಲೂರು ಮೂಕಾಂಬಿಕಾ ದೇವಿಯನ್ನು ಸಂದರ್ಶಿಲು ಕಾಲ್ನಡಿಗೆಯಲ್ಲಿ ಸಾಗುತ್ತಿರುತ್ತಾರೆ. ಬಾರ್ಕೂರನ್ನು ಹಾದು ಹೋಗುವ ಸಂದರ್ಭದಲ್ಲಿ ಶಂಕರಾಚಾರ್ಯರು ದಣಿವಾರಿಸಿಕೊಳ್ಳಲೆಂದು ಇದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಾರೆ. ಅವರನ್ನು ಗಮನಿಸಿದ ಸಮೀಪದ ಅಡಿಗರ ಮನೆಯವರು ಶಂಕರಾಚಾರ್ಯರಿಗೆ ಭೋಜನವನ್ನು ನೀಡುತ್ತಾರೆ. ಶಂಕರಾಚಾರ್ಯರು ಭೋಜನವನ್ನು ಸ್ವೀಕರಿಸುವ ಮೊದಲು ಅಕ್ಕಿ ಕಾಳುಗಳಿಂದ ಗಣಪತಿ ಚಿತ್ರವನ್ನು ಬಿಡಿಸಿ ಪೂಜಿಸುತ್ತಾರೆ ತದನಂತರ ಅದು ಗಣಪತಿಯ ಆಲಯವಾಗಿ ಮಾರ್ಪಾಡಾಗುತ್ತದೆ. == ದೇವರ ಬಗ್ಗೆ == ಗಣಪತಿ ವಿಗ್ರಹದ ಸೊಂಟದ ಸುತ್ತಲೂ ಬಟ್ಟೆ ಇದ್ದುದರಿಂದ ದೇವರಿಗೆ ಬಟ್ಟೆವಿನಾಯಕ ಎಂಬ ಹೆಸರು ಬಂದಿದೆ.ವಿಗ್ರಹವು ಉತ್ತರ ದಿಕ್ಕಿಗೆ ಮುಖ ಮಾಡಿದ್ದು ದಕ್ಷಿಣ ದಿಕ್ಕಿಗೆ ಸ್ವಲ್ಪ ವಾಲಿದೆ. ದೇವರಿಗೆ ಬಲಮುರಿ ಗಣಪತಿ ಎಂಬ ಹೆಸರು ಇದೆ. ಪ್ರಾಚೀನ ಕಾಲದಲ್ಲಿ ಕೊಲ್ಲೂರಿಗೆ ತೆರಳುತ್ತಿದ್ದ ಜನರಿಗೆ ಅರಣ್ಯ ಪ್ರದೇಶದಲ್ಲಿ ಸಾಗುವಾಗ ಉಂಟಾಗುತ್ತಿದ್ದ ಭಯವನ್ನು ದೇವರು ಹೋಗಲಾಡಿಸುತ್ತಿದ್ದರು. == ದೇವಸ್ಥಾನದ ಬಗ್ಗೆ == ಶಂಕರಾಚಾರ್ಯರ ಕಾಲದಲ್ಲಿ ಬಟ್ಟೆವಿನಾಯಕ ದೇವರು ಅರಣ್ಯದ ಒಳಗೆ ಒಂದು ಮರದ ಕೆಳಗೆ ಸ್ಥಾಪಿತಗೊಂಡಿದ್ದರು.ಕೊಲ್ಲೂರು ರಾಜ್ಯ ಹೆದ್ದಾರಿ ಅಗಲೀಕರಣಗೊಳ್ಳುವಾಗ ಪ್ರಕೃತಿಯೇ ಆಲಯವಾಗಿದ್ದ ಈ ದೇಗುಲವನ್ನು ತೆರವುಗೊಳಿಸುವ ಅನಿವಾರ್ಯತೆ ಬರುತ್ತದೆ. ನಂತರ ದೇವರಿಗೆ ಹೊಸ ದೇವಾಲಯವನ್ನು ನಿರ್ಮಿಸಲಾಗುತ್ತದೆ. ನಿಸರ್ಗ ಪ್ರಿಯವಾಗಿ ಪೂಜಿತಗೊಳ್ಳುತ್ತಿದ್ದ ಈ ದೇವರಿಗೆ ಯಾವುದೇ ಮೇಲ್ಛಾವಣಿ ಇರದ ಪೀಠದ ಮೇಲೆ ಗಣಪತಿಯನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂಡುಗಣಪತಿ ಮತ್ತು ರಂಗಪೂಜೆಗಳು ದೇವರಿಗೆ ಸಲ್ಲಿಸುವ ವಿಶೇಷ ಪೂಜೆಗಳು. == ಉಲ್ಲೇಖಗಳು ==